ಪರಿಕಲ್ಪನೆ :
ನುಡಿದರೆ ಮುತ್ತಿನ ಹಾರದಂತಿರಬೇಕು. ಕುಡಿದರೆ ಮತ್ತೇರುವಂತಿರಬೇಕು ಎಂಬ ನಾಣ್ಣುಡಿಯಂತೆ ಈ ಆಧುನಿಕ ಯುಗದಲ್ಲಿ ಕಾಲದ ಪ್ರಜ್ಞೆ ಇಲ್ಲದವರಿಗೆ ಗಡಿಯಾರ ಬರೀ ಅಲಂಕಾರಕ್ಕಷ್ಟೇ ಎಂಬಂತೆ 84 ಲಕ್ಷ ಜೀವರಾಶಿಗಳಲ್ಲಿ ಸುಜ್ಞಾನ ಮತ್ತು ವಿವೇಕ ಹೊಂದಿರುವ ಮಾನವ ಇಂದು ಮಾದಕ ವಸ್ತುಗಳ ಸೇವನೆ, ಧೂಮಪಾನ ಹಾಗೂ ಮಧ್ಯಪಾನ ಸೇವನೆಯು ಫ್ಯಾಷನ್, ಅಂತಸ್ತು ಹಾಗೂ ಪ್ರತಿಷ್ಠೆಯೆಂದು ಭಾವಿಸಿ ತಮ್ಮ ಜೀವನ ಮತ್ತು ಜೀವವನ್ನು ನಶ್ವರವಾಗಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ನೈತಿಕವಾಗಿ ಅಧಃಪತನದ ಕಡೆಗೆ ಸಾಗುವ ನಾಗರೀಕರಿಗೆ, ವಿಶೇಷವಾಗಿ ಯುವಕರಿಗೆ ಸದರಿ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯಕರ ಮಾಹಿತಿ ಮತ್ತು ಮಾರ್ಗದರ್ಶನ ನೀಡಿ, ಆಪ್ತ ಸಮಾಲೋಚನೆ ಮೂಲಕ ಸುಂದರ ಬದುಕನ್ನು ರೂಪಿಸಿಕೊಳ್ಳಲು ಜಾಗೃತಿ ಮೂಡಿಸಿ ಕುಟುಂಬದೊಂದಿಗೆ ವಿಲೀನಗೊಳಿಸುವ ಕಾರ್ಯಕ್ರಮದ ಅಂಗಸಂಸ್ಥೆಯೇ “ಸಮಗ್ರ ವ್ಯಸನಿಗಳ ಪುನರ್ವಸತಿ ಕೇಂದ್ರ.“
ಗುರಿ ಮತ್ತು ಉದ್ದೇಶಗಳು :
- ಮಾನವ ಜನ್ಮ ದೊಡ್ಡದು, ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂಬ ಪುರಂದರದಾಸರ ವಾಣಿಯಂತೆ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು.
- ಕ್ಷುಲ್ಲಕ, ಕ್ಷಣಿಕ ಸಂತೋಷಕ್ಕಾಗಿ ಚಟಗಳಿಗೆ ದಾಸರಾಗುವುದನ್ನು ನಿಯಂತ್ರಿಸುವುದು..
- ಮಧ್ಯವರ್ಜನ ಶಿಬಿರಗಳ ಮೂಲಕ ವ್ಯಸನಿಗಳ ಮನಪರಿವರ್ತನೆ ಮಾಡುವುದು..
- ಮಾದಕ ಹಾಗೂ ಮಧ್ಯಪಾನ ಸೇವನೆಯಿಂದ ಉಂಟಾಗುವ ಹೃದ್ರೋಗ, ನರಗಳ ದೌರ್ಬಲ್ಯ, ಮತಿಭ್ರಮಣೆ, ಕಣ್ಣಿನ ತೊಂದರೆ, ಸ್ಮರಣಶಕ್ತಿ ಕುಂದುವುದು, ದೈಹಿಕ ಸೆಳೆತ(ನಡುಕ) ನಿದ್ರಾಹೀನತೆ ಇತ್ಯಾದಿ ಪರಿಣಾಮಗಳ ಕುರಿತು ತಿಳುವಳಿಕೆ ನೀಡುವುದು..
ಆಯ್ಕೆ ಪ್ರಕ್ರಿಯೆ :
ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ವ್ಯಸನಿಯನ್ನು ವೈಯಕ್ತಿಕ ಹಾಗೂ ಕೌಟುಂಬಿಕ ಸಮಾಲೋಚನೆ ಮಾಡಿ, ವ್ಯಸನಿಯ ಸ್ವಇಚ್ಛೆಗೆ ಅನುಗುಣವಾಗಿ, ವೈದ್ಯರ ತಪಾಸಣೆಯ ಆಧಾರದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಒಂದು ವೇಳೆ ವ್ಯಸನಿಯು ಚಿಕಿತ್ಸೆಗೆ ನಿರಾಕರಿಸಿದರೆ ಮನವೊಲಿಸಿ ದಾಖಲಿಸಿಕೊಳ್ಳಲಾಗುವುದು.
ದಾಖಲಾತಿಗಳ ಮೂಲಗಳು :
- ಕುಟುಂಬ ವರ್ಗದವರಿಂದ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಮಾಜ ಸೇವಕರಿಂದ
- ಆರಕ್ಷಕ ಠಾಣೆ, ಸಾಂತ್ವನ ಕೇಂದ್ರಗಳು ಹಾಗೂ ವ್ಯಸನಮುಕ್ತಿ ಹೊಂದಿದ ವ್ಯಸನಿಗಳಿಂದ.
ಸೌಲಭ್ಯಗಳು :
- ಉತ್ತಮ ವಸತಿ ಮತ್ತು ಆಹಾರ, ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ
- ಆಪ್ತ ಸಮಾಲೋಚನೆ ಹಾಗೂ ಕುಟುಂಬದೊಂದಿಗೆ ಸಂವಾದ ಮತ್ತು ಗುಂಪು ಚರ್ಚೆ.
- ಮೌಲ್ಯಶಿಕ್ಷಣ, ವ್ಯಕ್ತಿತ್ವ ವಿಕಸನ, ಯೋಗ ಮತ್ತು ಧ್ಯಾನ.
- ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಸೋಲು, ಅನಾಸಕ್ತಿ ಹೊಂದಿದ ಸಂದರ್ಭದಲ್ಲಿ ಮನಸ್ಸಿನ ನಿಯಂತ್ರಣದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಮಾಹಿತಿ ಹಾಗೂ ಮಾರ್ಗದರ್ಶನ.
- ಉಪನ್ಯಾಸ ಕಾರ್ಯಕ್ರಮ-ಕಾರ್ಯಗಾರ-ಮನರಂಜನಾ ಕಾರ್ಯಕ್ರಮಗಳು, ಆಟೋಟಗಳು ಹಾಗೂ ಗ್ರಂಥಾಲಯದ ವ್ಯವಸ್ಥೆ.
ಸಮಗ್ರ ವ್ಯಸನಮುಕ್ತಿ ಹಾಗೂ ಪುನರ್ವಸತಿ ಕೇಂದ್ರ, ಶಿವಮೊಗ್ಗ.
ಕರ್ನಾಟಕ ರಾಜ್ಯದ ಮಲೆನಾಡಿನ ಹೆಬ್ಬಾಗಿಲೆಂದೇ ಪ್ರಸಿದ್ಧವಾಗಿರುವ ಶಿವಮೊಗ್ಗ ಜಿಲ್ಲೆಯೂ ಕೂಡ ಮದ್ಯ ವ್ಯಸನಿಗಳ ಸಮಸ್ಯೆಯಿಂದ ಹೊರತಾಗಿಲ್ಲ. ಇಲ್ಲಿ ಅನೇಕ ಜನರು ಮಾದಕ ವಸ್ತುಗಳ ಹಾಗೂ ಮದ್ಯ ವ್ಯವಸನಕ್ಕೆ ಬಲಿಯಾಗಿ ತಮ್ಮ ಸುಂದರವಾದ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಸಮಸ್ಯೆಯನ್ನು ಹೋಗಲಾಡಿಸುವ ಕ್ರಮವಾಗಿ ಸುರಭಿ ಸಂಸ್ಥೆಯು 2005 ರಲ್ಲಿ ಸಮಗ್ರ ವ್ಯಸನಿಗಳ ಪುನರ್ವಸತಿ ಕೇಂದ್ರವನ್ನು ಶಿವಮೊಗ್ಗ ನಗರದ ಗೆಜ್ಜೇನಹಳ್ಳಿ ರಸ್ತೆಯ ಪಕ್ಕದಲ್ಲಿರುವ ಆಟೋ ಕಾಲೋನಿಯಲ್ಲಿ ಸುಸಜ್ಜಿತವಾದ ಕಟ್ಟಡದಲ್ಲಿ ಪ್ರಾರಂಭಿಸಿ, ಕಾರ್ಯನಿರ್ವಹಿಸುತ್ತಾ ಬಂದು ಈ 11 ವರ್ಷಗಳ ಅವಧಿಯಲ್ಲಿ 4552 ಜನ ವ್ಯಸನಿಗಳಿಗೆ ಪುನರ್ವಸತಿ ಕಲ್ಪಿಸಿಕೊಡುವಲ್ಲಿ ಯಶಸ್ವಿಯಾಗಿರುತ್ತದೆ.
ಕೇಂದ್ರದಲ್ಲಿ ಕೌಶಲ್ಯಯುತ ತರಬೇತಿ ಪಡೆದ ಪ್ರಾಮಾಣಿಕ ಸಿಬ್ಬಂದಿಗಳು ವ್ಯಸನಿಗಳ ಮನೋಸ್ಥಿತಿಯನ್ನು ಅರ್ಥೈಸಿಕೊಂಡು ತಿದ್ದಿ, ವ್ಯಸನದಿಂದ ಹೊರ ತರುವಲ್ಲಿ ಹಾಗೂ ಅವರ ಜೊತೆಯಲ್ಲಿ ಹೃದಯ ಸ್ಪರ್ಶಿಯಾಗಿ ಸ್ವಾಸ್ಥ್ಯ ಬದುಕಿಗೆ ಬೆಳಕನ್ನು ತೋರಿಸುವ ಕೆಲಸವನ್ನು ನಿರ್ಮಲ ಮನಸ್ಸಿನಿಂದ ಮಾಡುತ್ತಿದ್ದಾರೆ. ವ್ಯಸನಿಗಳ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಅದಕ್ಕನುಗುಣವಾಗಿ ಕರ್ತವ್ಯ ನಿರ್ವಹಿಸಿ ಕಡಿಮೆ ಅವಧಿಯಲ್ಲೇ ವ್ಯಸನಿಗಳ ಮನ ಪರಿವರ್ತನೆ ಮಾಡುವ ಸಿಬ್ಬಂದಿಗಳ ಸಮೂಹವೇ ಈ ಕೇಂದ್ರದಲ್ಲಿದೆ.
ಕೇಂದ್ರದಲ್ಲಿ ದಿನನಿತ್ಯ ಪುನರ್ ಶಿಕ್ಷಣ ತರಬೇತಿ ಮತ್ತು ಗುಂಪು ಚರ್ಚೆಯನ್ನು ಏರ್ಪಡಿಸಿ, ಅವುಗಳ ಬಗ್ಗೆ ವ್ಯಸನಿಗಳು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುವುದರ ಬಗ್ಗೆ ತಿಳಿದುಕೊಳ್ಳಲು ವಾರದಲ್ಲಿ ಒಂದು ದಿನ ಪರೀಕ್ಷೆಯನ್ನು ನಡೆಸಿ, ಮಾನಸಿಕ ದೃಢತೆಯ ಮೌಲ್ಯಮಾಪನವನ್ನು ಮಾಡಲಾಗುತ್ತಿರುವ ಪ್ರಕ್ರಿಯೆಯಲ್ಲಿ ತೊಡಗಿರುವ ಮೌಲ್ಯ ಮಾಪಕರು ಹಾಗೂ ವ್ಯಸನಿಗಳನ್ನು ಚಿತ್ರದಲ್ಲಿ ಕಾಣಬಹುದು.
ಕೇಂದ್ರದಲ್ಲಿ ವ್ಯಸನಿಗಳು ದಾಖಲಾದ ನಂತರ ಅವರ ದುಶ್ಚಟಗಳ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳಲು ಮತ್ತು ಆ ಸಮಸ್ಯೆಯ ನಿವಾರಣೆಗೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಿಳಿಸಲು ವೈಯಕ್ತಿಕವಾಗಿ ಆಪ್ತ ಸಮಾಲೋಚನೆಯನ್ನು ಮಾಡಲಾಗುತ್ತದೆ. ಕೇಂದ್ರದಲ್ಲಿ ಕೌಶಲ್ಯಯುತ ತರಬೇತಿ ಹೊಂದಿದ ಆಪ್ತ ಸಮಾಲೋಚಕರು ಫಲಾನುಭವಿಗಳು ವೈಯಕ್ತಿಕ ಸಮಾಲೋಚನೆ ಮಾಡುತ್ತಿರುವುದುನ್ನು ಕಾಣಬಹುದು.