ಪರಿಕಲ್ಪನೆ :
ನುಡಿದರೆ ಮುತ್ತಿನ ಹಾರದಂತಿರಬೇಕು. ಕುಡಿದರೆ ಮತ್ತೇರುವಂತಿರಬೇಕು ಎಂಬ ನಾಣ್ಣುಡಿಯಂತೆ ಈ ಆಧುನಿಕ ಯುಗದಲ್ಲಿ ಕಾಲದ ಪ್ರಜ್ಞೆ ಇಲ್ಲದವರಿಗೆ ಗಡಿಯಾರ ಬರೀ ಅಲಂಕಾರಕ್ಕಷ್ಟೇ ಎಂಬಂತೆ 84 ಲಕ್ಷ ಜೀವರಾಶಿಗಳಲ್ಲಿ ಸುಜ್ಞಾನ ಮತ್ತು ವಿವೇಕ ಹೊಂದಿರುವ ಮಾನವ ಇಂದು ಮಾದಕ ವಸ್ತುಗಳ ಸೇವನೆ, ಧೂಮಪಾನ ಹಾಗೂ ಮಧ್ಯಪಾನ ಸೇವನೆಯು ಫ್ಯಾಷನ್, ಅಂತಸ್ತು ಹಾಗೂ ಪ್ರತಿಷ್ಠೆಯೆಂದು ಭಾವಿಸಿ ತಮ್ಮ ಜೀವನ ಮತ್ತು ಜೀವವನ್ನು ನಶ್ವರವಾಗಿಸಿಕೊಂಡು ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ನೈತಿಕವಾಗಿ ಅಧಃಪತನದ ಕಡೆಗೆ ಸಾಗುವ ನಾಗರೀಕರಿಗೆ, ವಿಶೇಷವಾಗಿ ಯುವಕರಿಗೆ ಸದರಿ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಆರೋಗ್ಯಕರ ಮಾಹಿತಿ ಮತ್ತು ಮಾರ್ಗದರ್ಶನ ನೀಡಿ, ಆಪ್ತ ಸಮಾಲೋಚನೆ ಮೂಲಕ ಸುಂದರ ಬದುಕನ್ನು ರೂಪಿಸಿಕೊಳ್ಳಲು ಜಾಗೃತಿ ಮೂಡಿಸಿ ಕುಟುಂಬದೊಂದಿಗೆ ವಿಲೀನಗೊಳಿಸುವ ಕಾರ್ಯಕ್ರಮದ ಅಂಗಸಂಸ್ಥೆಯೇ “ಸಮಗ್ರ ವ್ಯಸನಿಗಳ ಪುನರ್ವಸತಿ ಕೇಂದ್ರ.“
ಗುರಿ ಮತ್ತು ಉದ್ದೇಶಗಳು :
- ಮಾನವ ಜನ್ಮ ದೊಡ್ಡದು, ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ ಎಂಬ ಪುರಂದರದಾಸರ ವಾಣಿಯಂತೆ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ ಆಗುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು.
- ಕ್ಷುಲ್ಲಕ, ಕ್ಷಣಿಕ ಸಂತೋಷಕ್ಕಾಗಿ ಚಟಗಳಿಗೆ ದಾಸರಾಗುವುದನ್ನು ನಿಯಂತ್ರಿಸುವುದು..
- ಮಧ್ಯವರ್ಜನ ಶಿಬಿರಗಳ ಮೂಲಕ ವ್ಯಸನಿಗಳ ಮನಪರಿವರ್ತನೆ ಮಾಡುವುದು..
- ಮಾದಕ ಹಾಗೂ ಮಧ್ಯಪಾನ ಸೇವನೆಯಿಂದ ಉಂಟಾಗುವ ಹೃದ್ರೋಗ, ನರಗಳ ದೌರ್ಬಲ್ಯ, ಮತಿಭ್ರಮಣೆ, ಕಣ್ಣಿನ ತೊಂದರೆ, ಸ್ಮರಣಶಕ್ತಿ ಕುಂದುವುದು, ದೈಹಿಕ ಸೆಳೆತ(ನಡುಕ) ನಿದ್ರಾಹೀನತೆ ಇತ್ಯಾದಿ ಪರಿಣಾಮಗಳ ಕುರಿತು ತಿಳುವಳಿಕೆ ನೀಡುವುದು..
ಆಯ್ಕೆ ಪ್ರಕ್ರಿಯೆ :
ಕೇಂದ್ರಕ್ಕೆ ಬರುವ ಪ್ರತಿಯೊಬ್ಬ ವ್ಯಸನಿಯನ್ನು ವೈಯಕ್ತಿಕ ಹಾಗೂ ಕೌಟುಂಬಿಕ ಸಮಾಲೋಚನೆ ಮಾಡಿ, ವ್ಯಸನಿಯ ಸ್ವಇಚ್ಛೆಗೆ ಅನುಗುಣವಾಗಿ, ವೈದ್ಯರ ತಪಾಸಣೆಯ ಆಧಾರದಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಒಂದು ವೇಳೆ ವ್ಯಸನಿಯು ಚಿಕಿತ್ಸೆಗೆ ನಿರಾಕರಿಸಿದರೆ ಮನವೊಲಿಸಿ ದಾಖಲಿಸಿಕೊಳ್ಳಲಾಗುವುದು.
ದಾಖಲಾತಿಗಳ ಮೂಲಗಳು :
- ಕುಟುಂಬ ವರ್ಗದವರಿಂದ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಮಾಜ ಸೇವಕರಿಂದ
- ಆರಕ್ಷಕ ಠಾಣೆ, ಸಾಂತ್ವನ ಕೇಂದ್ರಗಳು ಹಾಗೂ ವ್ಯಸನಮುಕ್ತಿ ಹೊಂದಿದ ವ್ಯಸನಿಗಳಿಂದ.
ಸೌಲಭ್ಯಗಳು :
- ಉತ್ತಮ ವಸತಿ ಮತ್ತು ಆಹಾರ, ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ
- ಆಪ್ತ ಸಮಾಲೋಚನೆ ಹಾಗೂ ಕುಟುಂಬದೊಂದಿಗೆ ಸಂವಾದ ಮತ್ತು ಗುಂಪು ಚರ್ಚೆ.
- ಮೌಲ್ಯಶಿಕ್ಷಣ, ವ್ಯಕ್ತಿತ್ವ ವಿಕಸನ, ಯೋಗ ಮತ್ತು ಧ್ಯಾನ.
- ಜೀವನದಲ್ಲಿ ಜಿಗುಪ್ಸೆ, ನಿರಾಸೆ, ಸೋಲು, ಅನಾಸಕ್ತಿ ಹೊಂದಿದ ಸಂದರ್ಭದಲ್ಲಿ ಮನಸ್ಸಿನ ನಿಯಂತ್ರಣದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಮಾಹಿತಿ ಹಾಗೂ ಮಾರ್ಗದರ್ಶನ.
- ಉಪನ್ಯಾಸ ಕಾರ್ಯಕ್ರಮ-ಕಾರ್ಯಗಾರ-ಮನರಂಜನಾ ಕಾರ್ಯಕ್ರಮಗಳು, ಆಟೋಟಗಳು ಹಾಗೂ ಗ್ರಂಥಾಲಯದ ವ್ಯವಸ್ಥೆ.
ಸಮಗ್ರ ವ್ಯಸನ ಮುಕ್ತ ಮತ್ತು ಪುನರ್ವಸತಿ ಕೇಂದ್ರ, ಕಾರವಾರ
ಕರ್ನಾಟಕದ ಕಾಶ್ಮೀರವೆಂದೇ ಹೆಸರಾಗಿರುವ ಉತ್ತರ ಕನ್ನಡ ಜಿಲ್ಲೆಯು ಹೆಚ್ಚು ಕರಾವಳಿ ಪ್ರದೇಶವನ್ನು ಹೊಂದಿದ್ದು, ಮೀನುಗಾರಿಕೆಯೇ ಪ್ರಮುಖ ಉದ್ಯೋಗವಾಗಿದೆ. ಬಹು ಸಂಖ್ಯೆಯಲ್ಲಿರುವ ಮೀನುಗಾರರು ಮೀನು ಹಿಡಿದು, ಬರುವ ಆದಾಯದಲ್ಲೇ ಜೀವನ ನಿರ್ವಹಣೆ ಮಾಡುವುದನ್ನು ಕಾಣಬಹುದು. ಹಗಲೆಲ್ಲ ಶ್ರಮವಹಿಸಿ, ಮೈಯನ್ನು ದಂಡಿಸಿಕೊಂಡು ಬಂದ ದೇಹಕ್ಕೆ ಅಯಾಸ ನಿವಾರಣೆ ನೆಪದಲ್ಲಿ ಸ್ಥಳೀಯವಾಗಿ ತಯಾರಿಸುವ ಹಾಗೂ ಕಡಿಮೆ ಬೆಲೆಗೆ ದೊರೆಯುವ ಮದ್ಯಸೇವನೆ ಚಟಕ್ಕೆ ಬಲಿಯಾಗುತ್ತಿದ್ದಾರೆ. ಈ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಸುರಭಿ ಸಂಸ್ಥೆಯು 2016 ರಲ್ಲಿ ಸಮಗ್ರ ವ್ಯಸನಿಗಳ ಪುನರ್ವಸತಿ ಕೇಂದ್ರವನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ಸುಸಜ್ಜಿತವಾದ ಕಟ್ಟಡದಲ್ಲಿ ಪ್ರಾರಂಭಿಸಿ ಈವರೆಗೂ 392 ಜನ ವ್ಯಸನಿಗಳಿಗೆ ಚಿಕಿತ್ಸೆ ನೀಡಿ ವ್ಯಸನಮುಕ್ತಗೊಳಿಸಿ ಪುನರ್ವಸತಿ ಕಲ್ಪಸಿಕೊಡಲಾಗಿದೆ.
ಕೇಂದ್ರದಲ್ಲಿ ಮಾದಕ ವಸ್ತುಗಳ ಹಾಗೂ ಮದ್ಯ ಸೇವನೆಯ ದುಷ್ಪರಿಣಾಮಗಳ ಬಗ್ಗೆ ತರಬೇತಿ ಪಡೆದ, ಆಳವಾದ ಜ್ಞಾನವುಳ್ಳ ಸಿಬ್ಬಂದಿಗಳು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಬ್ಬಂದಿಗಳು ವ್ಯಸನಿಗಳ ಬದುಕನ್ನು ಬದಲಾಯಿಸುವ ದಿಕ್ಸೂಚಿಯಂತೆ ಮಾರ್ಗದರ್ಶಕರಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೇಂದ್ರಕ್ಕೆ ಬಂದ ವ್ಯಸನಿಗಳ ಜೊತೆ ಸೌಹಾರ್ದತೆಯಿಂದ ನಡೆದುಕೊಂಡು ತ್ವರಿತಗತಿಯಲ್ಲಿ ಗುಣಮುಖರಾಗುವಂತೆ ನೊಡಿಕೊಳ್ಳುವ ಸಿಬ್ಬಂದಿಯನ್ನು ಇಲ್ಲಿ ಕಾಣಬಹುದು.
ಕೇಂದ್ರದಲ್ಲಿ ದಾಖಲಾಗಿ ವ್ಯಸನಿಯು ವ್ಯಸನಮುಕ್ತನಾಗಿ ಬಿಡುಗಡೆಯಾದ ನಂತರ ಸಿಬ್ಬಂದಿಯವರು ವ್ಯಸನಮುಕ್ತ ಫಲಾನುಭವಿಯ ಕುಟುಂಬಕ್ಕೆ ಭೇಟಿ ನೀಡಿ ವ್ಯಸನಿಯು ವ್ಯಸನದಿಂದ ಸಂಪೂರ್ಣವಾಗಿ ಮುಕ್ತರಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಒಂದು ವೇಳೆ ಅವರ ಜೀವನದಲ್ಲಿ ಮತ್ತೇನಾದರೂ ಸಮಸ್ಯೆಗಳಿದ್ದರೆ ಪರಿಹಾರ ನೀಡುವುದರ ಜೊತೆಗೆ ನಿರಂತರ ಅನುಪಾಲನಾ ಕಾರ್ಯವನ್ನು ಕೈಗೊಳ್ಳಲಾಗುವುದು.
ಕೇಂದ್ರದ ಸಿಬ್ಬಂದಿಯವರಿಂದ ಮೀನು ಬಲೆ ತಯಾರಿಸುವ ಕಾರ್ಮಿಕರಿಗೆ ಮಾದಕ ವಸ್ತು ಹಾಗೂ ಮದ್ಯಪಾನ ಸೇವನೆಯ ದುಷ್ಪರಿಣಾಮಗಳು ಹಾಗೂ ವೈಯಕ್ತಿಕವಾಗಿ ಮತ್ತು ಕುಟುಂಬಗಳಿಗೆ ಆಗುವ ನಷ್ಟಗಳು ಹಾಗೂ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮದ್ಯಸೇವನೆಯಿಂದಾಗಿ ಕ್ಷಣಿಕ ಮೋಜಿಗಾಗಿ ಬಲಿಯಾಗಬಾರದೆಂಬ ತಿಳುವಳಿಕೆ ನೀಡುತ್ತಿರುವುದನ್ನು ಕಾಣಬಹುದು.