ಪರಿಕಲ್ಪನೆ :
ಭಾರತವು ಅಭಿವೃದ್ಧಿ ಹೊಂದುತ್ತಿರುವ ದೇಶ. ಇಂದು ಸಾಮಾಜಿಕ ಸಂಬಂಧಗಳು ಹಾಗೂ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಯುವಕರು ತಂತ್ರಜ್ಞಾನ, ಹಣದ ದುರಾಸೆ ಹಾಗೂ ಸ್ವಾರ್ಥ ಪರ ಜೀವನದಿಂದ ಹಿರಿಯರೆಂದರೆ ಅನುತ್ಪಾದಕರು, ತಾಜ್ಯವಸ್ತುಗಳು ಹಾಗೂ ರಾತ್ರಿ ಕಾಲದ ತಂಗುದಾಣದ ಜೀವಿಗಳೆಂದು ಭಾವಿಸಿ ಅವರ ಆಸೆ, ಆಕಾಂಕ್ಷೆ, ಮೂಲಭೂತ ಅಗತ್ಯತೆಗಳ ಮತ್ತು ಭಾವನೆಗಳಿಗೆ ಬೆಲೆ ಕೊಡದೆ ವೃದ್ಧಾಶ್ರಮಕ್ಕೆ ತಳ್ಳುವ ಕೆಲಸವನ್ನು ಮಾಡುತ್ತಿದ್ದಾರೆ. ಇಂತಹ ಹಿರಿಯರು ಮಾಹಿತಿಯ ಬಂಡಾರ ಹಾಗೂ ಕುಟುಂಬದ ಆಸ್ತಿ ಮತ್ತು ವಿಶ್ವಕೋಶ. ಇವರ ಜೀವಕ್ಕೆ ವರ್ಷಗಳು ತುಂಬಿವೆ. ಆದರೆ ಇವರ ವರ್ಷಗಳಿಗೆ ಜೀವ ತುಂಬುವ ಕೆಲಸವನ್ನು ಒಂದು ಸವಾಲೆಂದೇ ಭಾವಿಸಿ ಮಾನವೀಯತೆ ಹಣತೆಯಂತೆ ಕಾರ್ಯನಿರ್ವಹಿಸುವ ಕೇಂದ್ರವೇ ”ವೃದ್ಧಾಶ್ರಮ”’.
ಗುರಿ ಮತ್ತು ಉದ್ದೇಶಗಳು :
- ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಹಿರಿಯ ನಾಗರೀಕರನ್ನು ಪತ್ತೆ ಮಾಡಿ ದಾಖಲು ಮಾಡಿಕೊಳ್ಳುವುದು.
- ಇಂದು ನಾ ನಿನಗಾದರೆ, ನೀ ನನಗೆ ಎಂಬ ಭಾವನೆ ದೂರ ಸರಿದು, ನಾವೆಲ್ಲರೂ ಒಂದು ಕುಟುಂಬದವರು ಎಂಬ ಪರಿಕಲ್ಪನೆ ಮೂಡಿಸುವುದು.
- ಅಪ್ಪನ ಸ್ವತ್ತು ಬೇಕು, ಆದರೆ ಸಂಸ್ಕಾರ ಬೇಡ ಎನ್ನುವ ಮನೋಧರ್ಮಕ್ಕೆ ಹಣವಿದ್ದರೇ ಜಗತ್ತಿನಲ್ಲಿ ಎಲ್ಲ ಸಿಗುತ್ತದೆ ಎಂದು ಭಾವಿಸುವ ಮಕ್ಕಳಿಗೆ ತಂದೆ, ತಾಯಿಗಳು ಸಿಗುವುದು ಕಷ್ಟ ಎಂಬ ಸಂದೇಶ ಸಾರುವುದು.
- ದಿನನಿತ್ಯದ ಜೀವನದಲ್ಲಿ ಸ್ವತಂತ್ರರಾಗಿರುವಂತೆ ನೋಡಿಕೊಳ್ಳುವುದು.
- ದೃಢನಿರ್ಧಾರ, ಚೈತನ್ಯ ತುಂಬುವುದು, ಪ್ರಭುತ್ವ ನಾಗರೀಕರನ್ನಾಗಿ ಮಾಡುವುದು.
- ಪಾಲನೆ ಪೋಷಣೆ ಹಾಗೂ ರಕ್ಷಣೆ ನೀಡುವುದು.
ಅರ್ಹ ಫಲಾನುಭವಿಗಳು :
- ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಮಕ್ಕಳಿಂದ ನಿರ್ಲಕ್ಷಕ್ಕೊಳಗಾದ ಮಕ್ಕಳಿಲ್ಲದ 60 ವರ್ಷ ಮೇಲ್ಪಟ್ಟ ಹಿರಿಯರು.
- ದಾಖಲೆ ಸಂದರ್ಭದಲ್ಲಿ ಸಂಬಂಧಿಕರಾಗಲಿ, ಅಥವಾ ಪರಿಚಯವಿದ್ದ ವ್ಯಕ್ತಿಯ ಉಪಸ್ಥಿತಿ ಮತ್ತು ಅವರಿಂದ ದೃಢೀಕರಣ ಪತ್ರ.
- ಗುರುತಿನ ಚೀಟಿ ಹಾಗೂ ಎರಡು ಪಾಸ್ಪೋರ್ಟ್ ಭಾವಚಿತ್ರ.
ಸೌಲಭ್ಯಗಳು :
- ವಸತಿ ಮತ್ತು ಗುಣಮಟ್ಟದ ಆಹಾರ ಮತ್ತು ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ.
- ಆಪ್ತ ಸಮಾಲೋಚನೆ, ಕಾನೂನಿನ ನೆರವು.
- ಮನೋರಂಜನೆ, ಧಾರ್ಮಿಕ ಚಿಂತಕರಿಂದ ಪ್ರವಚನ.
ವೃದ್ಧಾಶ್ರಮ, ಗದಗ
ಬಾಲ್ಯ, ಯೌವ್ವನ, ಪ್ರೌಢವಸ್ಥೆ ಹಾಗೂ ಮುಪ್ಪು ನಮ್ಮ ಬಾಳಿನ ನಾಲ್ಕು ಹಂತಗಳು. ಅಕಾಲ ಮರಣ ಸಂಭವಿಸದಿದ್ದರೆ ಪ್ರತಿಯೊಬ್ಬರು ವೃದ್ಧಾಪ್ಯಕ್ಕೆ ಕಾಲಿಡುತ್ತಾರೆ. ‘ಮುಪ್ಪು ತಪ್ಪೇ’ ? ಕುಟುಂಬದಲ್ಲಿ ಹಿರಿಯರು ಇರಬೇಕು. ಹಿರಿಯರಿದ್ದ ಮನೆ ದೇವಾಲಯವಿದ್ದಂತೆ. ಮುಪ್ಪಿನಲ್ಲಿ ತಂದೆ ತಾಯಿಗಳನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ತಮ್ಮನ್ನು ಚಿಕ್ಕಂದಿನಿಂದ ದೊಡ್ಡವರಾಗುವವರೆಗೆ ಸಾಕಿ, ಸಲಹಿ, ಬೆಳೆಸಿ ಸುಸಂಕೃತ ನಾಗರೀಕರನ್ನಾಗಿ ಮಾಡುತ್ತಾರೆ. ಆದಾಗ್ಯೂ ವೃದ್ಧಾಪ್ಯದಂಚಿನ ಸಮಯದಲ್ಲಿ ಮಕ್ಕಳು ಜನ್ಮ ನೀಡಿದ ತಂದೆ ತಾಯಿಗಳನ್ನು ಸಲಹಲು ಮುಂದಾಗುವುದಿಲ್ಲ. ವೃದ್ಧಾಪ್ಯ ಜೀವನದಲ್ಲಿ ಮಕ್ಕಳಿಂದ ತಾತ್ಸಾರಕ್ಕೊಳಕ್ಕಾಗಿ ಕನಿಷ್ಠ ಸೌಕರ್ಯಗಳು ಸಿಗದ ಕಾರಣ ತಂದೆ ತಾಯಿಗಳು ಬೇಸತ್ತು ತಮ್ಮ ಜೀವನದ ಗುರಿಯನ್ನೇ ಬದಲಾಯಿಸಿಕೊಂಡು ಜಿಗುಪ್ಸೆಯಿಂದ ಮರಣದ ಹಾದಿಯನ್ನು ತುಳಿಯುತ್ತಾರೆ. ಮಕ್ಕಳಿಗೂ ಮತ್ತು ಸಂಬಂಧಿಕರಿಗೂ ಬೇಡವಾದ ವೃದ್ಧರ ಬಾಳಿಗೆ ಆಶ್ರಯ ಒದಗಿಸಲು ಸಮಾಜವೇ ಹೆಗಲುಕೊಟ್ಟು ನಿಲ್ಲುವಂತಹ ಪರಿಸ್ಥಿತಿ ಉಂಟಾಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸುರಭಿ ಸಂಸ್ಥೆಯು ಗಂಡುಮೆಟ್ಟಿದ ನಾಡು ಗದಗ ಜಿಲ್ಲೆಯ ಹುಲುಕೋಟೆ ಗ್ರಾಮದಲ್ಲಿ 2006 ರಲ್ಲಿ ನಿರ್ಮಲವಾದ ಜಾಗದಲ್ಲಿ ಸಕಲ ಸೌಲಭ್ಯಗಳನ್ನೊಳಗೊಂಡ ಕಟ್ಟಡದಲ್ಲಿ 2006-07ರಲ್ಲಿ ವೃದ್ಧಾಶ್ರಮವನ್ನು ಸ್ಥಾಪಿಸಿ 2016-17ರ ವರೆಗಿನ ಈ ಹತ್ತು ವರ್ಷಗಳಲ್ಲಿ ಸುಮಾರು 147 ಜನ ವೃದ್ಧರಿಗೆ ಆಶ್ರಯ ನೀಡಿ ಒಂದು ನೆಲೆಯನ್ನು ಕಟ್ಟಿಕೊಟ್ಟಿರುವ ಹೆಮ್ಮೆ ಕೇಂದ್ರದ್ದಾಗಿರುತ್ತದೆ.
ಆಶ್ರಮದಲ್ಲಿ ಹಿರಿಯ ನಾಗರೀಕರ ಆರೈಕೆ ಬಗ್ಗೆ ತರಬೇತಿ ಪಡೆದ, ನುರಿತ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸುತ್ತಿದ್ದಾರೆ. ಮನೆಯ ವಾತಾವರಣದಂತೆ ನಮ್ಮ ಸಿಬ್ಬಂದಿ ವರ್ಗದವರೆ ಅವರ ಮಕ್ಕಳಂತೆ ಕಾಳಜಿ ವಹಿಸಿ ಅವರ ಯೋಗಕ್ಷೇಮವನ್ನು ವಿಚಾರಿಸುವುದರ ಜೊತೆಗೆ ಖುಷಿಯಿಂದ ಇರುವಂತೆ ನೋಡಿಕೊಳ್ಳುತ್ತಾರೆ.
ಆಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ನಾಗರಿಕರಿಗೆ ಹಲವಾರು ರೀತಿಯಲ್ಲಿ ಮಾನಸಿಕವಾಗಿ ಜರ್ಜರಿತರಾಗಿರುತ್ತಾರೆ. ಅವರಿಗೆ ಅವರ ಬದುಕಿನಲ್ಲಿ ಆದ ನೋವನ್ನು ಮತ್ತು ಏಕಾಂಗಿತನವನ್ನು ಹೋಗಲಾಡಿಸುವ ಸಲುವಾಗಿ ಒಳಾಂಗಣ ಆಟಗಳು ಹಾಗೂ ಭಜನಾ ಕಾರ್ಯಕ್ರಮಗಳ ಜೊತೆಗೆ ದೂರದರ್ಶನ ವ್ಯವಸ್ಥೆ ಸಹ ಮಾಡಲಾಗಿದೆ.
ಆಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ನಾಗರೀಕರಿಗೆ ಪ್ರತಿ ವರ್ಷವು ಸುತ್ತಮುತ್ತಲಿರುವ ಪ್ರಸಿದ್ಧ ಪ್ರವಾಸಿತಾಣಗಳಿಗೆ ಪ್ರವಾಸವನ್ನು ಹಮ್ಮಿಕೊಳ್ಳುವುದರ ಮೂಲಕ ಹಿರಿಯರನ್ನು ಖುಷಿಯಾಗಿಡುವುದರ ಜೊತೆಗೆ ನೊಂದ ಮನಸ್ಸಿಗೆ ಆತ್ಮಬಲವನ್ನು ತುಂಬುವ ಕೆಲಸವನ್ನು ಮಾಡಲಾಗುತ್ತದೆ. ಪ್ರವಾಸ ಕಾಲದಲ್ಲಿ ಹಿರಿಯರ ಸುರಕ್ಷತೆ ಬಗ್ಗೆ ಕ್ರಮ ವಹಿಸಲಾಗುವುದು. ಪ್ರವಾಸ ಕಾಲದಲ್ಲಿರುವ ವೃದ್ದರನ್ನು ಚಿತ್ರದಲ್ಲಿ ಕಾಣಬಹುದು.