ಉಜ್ವಲ - ವಾಣಿಜ್ಯ ಲೈಂಗಿಕ ಶೋಷಣೆಗಾಗಿ ಮಾನವನ ಕಳ್ಳ ಸಾಗಾಣೆಯ ತಡೆಗಟ್ಟುವಿಕೆ, ರಕ್ಷಣೆ, ಸಾಗಣೆಯಿಂದ ರಕ್ಷಿಸಿದವರ ಪುನರ್ವಸತಿ ಮತ್ತು ಮರು-ಕುಟುಂಬ ಸೇರ್ಪಡೆಯ ಸಮಗ್ರ ಯೋಜನೆ - ಶಿವಮೊಗ್ಗ

ಪರಿಕಲ್ಪನೆ :

ಇಂದು ಮಾನವೀಯ ಮೌಲ್ಯಗಳು ನಶಿಸಿ ಮಾರುಕಟ್ಟೆಯ ಮೌಲ್ಯಕ್ಕೆ ಹವಣಿಸುತಿರುವ ಸಮಾಜದಲ್ಲಿ ವಿಕೃತ ಮನಸ್ಸಿನ ಮತ್ತು ಸ್ವಾರ್ಥಪರ ಲಾಲಸೆಗೆ ಮಹಿಳೆಯರು ಮತ್ತು ಮಕ್ಕಳನ್ನು ಅನೈತಿಕವಾಗಿ ಸಾಗಾಣಿಕೆ ಮೂಲಕ ಅತ್ಯಾಚಾರ, ಮಾನಸಿಕ ಹಿಂಸೆ, ದೈಹಿಕ ದಂಡನೆ ಹಾಗೂ ವಿವಿಧ ಕೆಳಮಟ್ಟದ ವೃತ್ತಿ ಹಾಗೂ ಪ್ರವೃತ್ತಿಗೆ ತೊಡಗಿಸಿ ಹಣಗಳಿಸಲು ಮಾಡುವ ದೌರ್ಜನ್ಯವನ್ನು ತಡೆದು ಸಾಗಾಣೆಯಿಂದ ರಕ್ಷಿಸಲ್ಪಟ್ಟ ಮಹಿಳೆ / ಮಕ್ಕಳ ಸಮಸ್ಯೆ ಇತ್ಯರ್ಥವಾಗುವವರೆಗೂ ಅವರಿಗೆ ಮೂಲಭೂತ ಸೌಕರ್ಯಗಳ ಜೊತೆಗೆ ತಾತ್ಕಾಲಿಕ ರಕ್ಷಣೆ ಮತ್ತು ಆಶ್ರಯ ನೀಡಿ ಅವರ ಹಕ್ಕುಗಳನ್ನು ಗೌರವಿಸಿ ರಕ್ಷಿಸುವ ಮಹತ್ಕಾರ್ಯದ ಜೊತೆಗೆ ಮಹಿಳೆ / ಮಕ್ಕಳ ಪುನರ್ವಸತಿ ಕಾರ್ಯವನ್ನು ಅನುಷ್ಠಾನಗೊಳಿಸುವ ಯೋಜನೆಯೇ ಉಜ್ವಲ ಯೋಜನೆ’’.

ಗುರಿ ಮತ್ತು ಉದ್ದೇಶ :
  1. ಮಹಿಳೆಯರು ಹಾಗೂ ಮಕ್ಕಳನ್ನು ಬೀದಿ ನಾಟಕ, ಜಾಥ, ಕಾರ್ಯಾಗಾರಗಳು ಹಾಗೂ ಕರಪತ್ರಗಳ ಮೂಲಕ ಜಾಗೃತಗೊಳಿಸಿ ಸಾಗಾಣಿಕೆ ನಿಯಂತ್ರಿಸುವುದು.
  2. ಗ್ರಾಮಪಂಚಾಯಿತಿಯ ಜನ ಪ್ರತಿನಿಧಿಗಳು ಹಾಗೂ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಮಕ್ಕಳಿಗೆ ಅನೈತಿಕ ಸಾಗಾಣಿಕೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸುವುದು.
  3. ಸಮುದಾಯ ಗುಂಪು ರಚನೆ ಮತ್ತು ಕಾಳಜಿ ಸಮಿತಿ ರಚಿಸಿ, ಸಭೆಗಳನ್ನು ನಡೆಸಿ ಸೂಕ್ತ ರಕ್ಷಣೆ ಒದಗಿಸುವುದು.
  4. ರಹಸ್ಯ ಕಾರ್ಯಾಚರಣೆ ಮೂಲಕ ಅನೈತಿಕ ಸಾಗಾಣಿಕೆ ಮತ್ತು ಮಾರಾಟ ಜಾಲಗಳನ್ನು ಪತ್ತೆ ಹಚ್ಚಿ ಅರ್ಹರಿಗೆ ಸಾಮಾಜಿಕ ಭದ್ರತೆ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸುವುದು. ಮತ್ತು ಸಾಗಾಣೆದಾರರನ್ನು ಗುರ್ತಿಸಿ ಸೂಕ್ತ ಕಾನೂನು ರೀತ್ಯ ಶಿಕ್ಷೆಗೊಳಪಡಿಸುವುದು. ಮಹಿಳೆಯರ ಮತ್ತು ಮಕ್ಕಳ ಮಾನವ ಹಕ್ಕುಗಳ ರಕ್ಷಣೆ, ಗೌರವಿಸುವುದು ಹಾಗೂ ಉಲ್ಲಂಘನೆಯಾಗದಂತೆ ತಡೆಯುವುದು.
ಅರ್ಹ ಫಲಾನುಭವಿಗಳು :

ದುರ್ಬಲ ವರ್ಗದ ಹಾಗೂ ಸಾಗಾಣಿಕೆ ಅಪಾಯದ ಅಂಚಿನಲ್ಲಿರುವ ಮಹಿಳೆಯರು ಮತ್ತು ಮಕ್ಕಳು, ಅವಿವಾಹಿತ ಮಹಿಳೆಯರು, ಬಾಲಕೀಯರು, ವಿಧವೆಯರು, ವಿಚ್ಛೇದನಕ್ಕೊಳಗಾದ ಮಹಿಳೆಯರು, ಪ್ರಾಯ ಪೂರ್ವ ಬಾಲಕೀಯರು ಹಾಗೂ ಏಡ್ಸ್‍ನಿಂದ ಬಳಲುತ್ತಿರುವ ಮಹಿಳೆಯರು ಹಾಗೂ ಮಕ್ಕಳು. ಪ್ರಕೃತಿ ವಿಕೋಪಕ್ಕೆ ಒಳಗಾದ ಪ್ರದೇಶದ ಮಹಿಳೆಯರು/ಮಕ್ಕಳು, ನಿರ್ಲಕ್ಷ್ಯಿತ ಮಕ್ಕಳು, ಆಶ್ರಯ-ರಕ್ಷಣೆ ಹಾಗೂ ನೆರವು ಕೋರಿ ಬಂದ ಮಹಿಳೆಯರು ಹಾಗೂ ಮಕ್ಕಳು.

ಸೌಲಭ್ಯಗಳು :
  • ಮೂಲಭೂತ ಸೌಕರ್ಯಗಳಾದ ತಾತ್ಕಾಲಿಕ ಆಶ್ರಯ, ಊಟ ಮತ್ತು ವಸತಿ.
  • ಅನೌಪಚಾರಿಕ ಶಿಕ್ಷಣ, ಮನರಂಜನೆ ಹಾಗೂ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ.
  • ಆಪ್ತ ಸಮಾಲೋಚನೆ ಹಾಗೂ ಕುಟುಂಬ ಸಮಾಲೋಚನೆ ಮತ್ತು ರಕ್ಷಣೆ.
  • ಆದಾಯೋತ್ಪನ್ನ ವೃತ್ತಿಪರ ಚಟುವಟಿಕೆಗಳ ತರಬೇತಿಗಳಾದ ಟೈಲರಿಂಗ್, ಗೊಂಬೆಗಳ ತಯಾರಿಕೆ, ಕಸೂತಿ ಕೆಲಸ ಇತ್ಯಾದಿಗಳನ್ನು ನೀಡಿ ಪುನರ್ವಸತಿ ಕಲ್ಪಿಸಿಕೊಡುವುದು.
  • ಕುಟುಂಬಕ್ಕೆ ವಿಲೀನಗೊಳಿಸಿದ ನಂತರ ನಿರಂತರ ಅನುಸರಣೆ ಮಾಡುವುದು.
ದಾಖಲಾತಿ ಮೂಲಗಳು :
  • ಪೊಲೀಸ್ ಠಾಣೆ, ಗ್ರಾಮ ಪಂಚಾಯ್ತಿ, ಸಾರ್ವಜನಿಕರಿಂದ ಹಾಗೂ ಕುಟುಂಬದವರಿಂದ.
  • ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘ, ಸ್ವಯಂ ಸೇವಾ ಸಂಘ ಹಾಗೂ ಸಮಾಜ ಸೇವಕರಿಂದ
  • ಗ್ರಾಮ, ತಾಲ್ಲೂಕು, ಜಿಲ್ಲಾ ಮಟ್ಟದ ಕಾವಲು ಸಮಿತಿಗಳು, ಸಾಂತ್ವನ ಕೇಂದ್ರಗಳು ಹಾಗೂ ಮಕ್ಕಳ ಸಹಾಯ ವಾಣಿ.
  • ಮಿಸ್ಸಿಂಗ್ ಚೈಲ್ಡ್ ಬ್ಯೂರೋ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಅಧಿಕಾರಿಗಳು.

ಉಜ್ವಲ ಯೋಜನೆ, ಶಿವಮೊಗ್ಗ. (ಮಹಿಳೆಯರ ಹಾಗೂ ಮಕ್ಕಳ ಮಾರಾಟ ಮತ್ತು ಸಾಗಾಣಿಕೆ ನಿಂಯತ್ರಣ ಯೋಜನೆ)

ಸಮಾಜದಲ್ಲಿ ಹೆಣ್ಣು ಪಾಲಿಗೆ ಕಳಂಕವಾಗಿರುವ ಹಾಗೂ ಸಮಾಜದ ಪಿಡುಗಾಗಿರುವ ಬೂದಿಮುಚ್ಚಿದ ಕೆಂಡದಂತಿರುವ, ಸ್ತ್ರೀಯರ ಪ್ರಾಬಲ್ಯಕ್ಕೆ ಮಾರಕವಾಗಿ ಬೃಹದಕಾರವಾಗಿ ಬೆಳೆಯುತ್ತಿರುವ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಮತ್ತು ಮಾರಾಟವನ್ನು ತಡೆಗಟ್ಟಲು, ಸಾಗಾಣಿಕೆಗೆ ಒಳಗಾದ ಮಹಿಳೆಯರನ್ನು ಮತ್ತು ಮಕ್ಕಳನ್ನು ರಕ್ಷಿಸಿ, ಪುನರ್ವಸತಿ ಸೌಲಭ್ಯಗಳನ್ನು ಕಲ್ಪಿಸಲು ಸುರಭಿ ಸ್ವಯಂ ಸೇವಾ ಸಂಸ್ಥೆಯು ದಿನಾಂಕ : 28–03–2009 ರಂದು ಶಿವಮೊಗ್ಗ ನಗರದಲ್ಲಿ ಮೂಲಭೂತ ಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಕಟ್ಟಡದಲ್ಲಿ ‘ಉಜ್ವಲ ಯೋಜನೆ’ಯನ್ನು ಪ್ರಾರಂಭಿಸಿ ಈ 8 ವರ್ಷಗಳ ಅವಧಿಯಲ್ಲಿ ಸುಮಾರು 1424 ಸಂತ್ರಸ್ಥೆಯರನ್ನು ದಾಖಲಿಸಿಕೊಂಡು ಕಾನೂನು ನೆರವು ನೀಡಿ ರಕ್ಷಿಸುವುದರ ಮೂಲಕ ಅವರಲ್ಲಿ ದೈರ್ಯತುಂಬುವ ಕೆಲಸವನ್ನು ಮಾಡಿ ಪುರ್ನವಸತಿ ಕಲ್ಪಿಸಿಕೊಡಲಾಗಿದೆ.

ಕೇಂದ್ರವು ನುರಿತ, ವಿಶೇಷವಾಗಿ ಪರಿಣಿತಿ ಹೊಂದಿದ ಅನುಭವ ಹಾಗೂ ಸೇವಾ ಮನೋಭಾವವುಳ್ಳ ಯೋಜನಾ ನಿರ್ದೇಶಕರನ್ನೊಳಗೊಂಡಂತೆ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಾ ಬಂದಿರುತ್ತಾರೆ. ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟಲು ಜನಜಾಗೃತಿ ಕಾರ್ಯಕ್ರಮಗಳ ಸಭೆಗಳನ್ನು ನಡೆಸುವುದು ಹಾಗೂ ಬಾಲಕ / ಬಾಲಕಿಯರ ಸಂಘ ಮತ್ತು ಕಾವಲು ಸಮಿತಿಗಳ ರಚನೆ ಮಾಡಿ, ಅರಿವು ಮೂಡಿಸುವುದರ ಜೊತೆಗೆ ರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸಿಬ್ಬಂದಿಗಳು ಸಾರ್ಥಕ ಸೇವೆ ಸಲ್ಲಿಸುತ್ತಿದ್ದಾರೆ. ವಿಶೇಷವಾಗಿ ಸಂತ್ರಸ್ಥ ಮಹಿಳೆಯರ ಪ್ರತ್ಯೇಕ ಸಮಸ್ಯೆಗಳನ್ನು ಹಾಲಿಸಿ ತಕ್ಕ ಪರಿಹಾರ ಕಂಡುಕೊಳ್ಳುವ ಕೆಲಸದಲ್ಲಿ ನೆರವಾಗುವ ಸಿಬ್ಬಂದಿಯನ್ನು ಕೇಂದ್ರದಲ್ಲಿ ಕಾಣಬಹುದು.

ಉಜ್ವಲ ಸಿಬ್ಬಂದಿ ಹಾಗೂ ಪೋಲಿಸ್ ಇಲಾಖೆಯ ರಕ್ಷಣಾ ಕಾರ್ಯಾಚರಣೆಯಲ್ಲಿ ರಕ್ಷಿಸಿದ ಮಹಿಳೆಯ ಕುಟುಂಬವು ಅವಳನ್ನು ಕುಟುಂಬ ವಿಲೀನಕ್ಕೆ ನಿರಾಕರಿಸಿದ ಮೇರೆಗೆ ಮಹಿಳೆಯು ನಮ್ಮ ಕೇಂದ್ರದಲ್ಲಿಯೇ ಆಶ್ರಯ ಮತ್ತು ವಸತಿಯನ್ನು ಮುಂದುವರೆಸಿ ತರಬೇತಿ ಪಡೆದು, ಸೂಕ್ತ ಸಮಾಲೋಚನೆಯ ನಂತರ ಮಾನಸಿಕವಾಗಿ ತಾನು ಹೊಸ ಕುಟುಂಬಕ್ಕೆ ಸೇರ್ಪಡೆಗೊಳ್ಳಲು ಪರಿವರ್ತನೆಯಾಗಿರುತ್ತಾಳೆ. ನಂತರದಲ್ಲಿ ಕೇಂದ್ರದ ಸಿಬ್ಬಂದಿಯ ಪರಿಶ್ರಮದ ಫಲವಾಗಿ ಸದರಿ ಮಹಿಳೆಗೆ ಮದುವೆ ಮಾಡುವ ಕಾರ್ಯದಲ್ಲಿ ವರನನ್ನು ಹುಡುಕಿ, ಅವನ ಪೂರ್ವಾಪರಗಳನ್ನು ಪರಿಶೀಲಿಸಿ, ಅವನ ಸಾಮಾಜಿಕ ಹಾಗೂ ಆರ್ಥಿಕ ಸಾಮಥ್ರ್ಯವನ್ನು ತಿಳಿದು ಮದುವೆ ಮಾಡುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು.

ಅಭಿಪ್ರಾಯ :

ಈ ದಿನ ಅಂದರೆ ದಿ:21.10.2014ರಂದು ದೀಪಾವಳಿಯ ವಿಶೇಷತೆ ಇದ್ದು, ಎಲ್ಲಾ ಮಕ್ಕಳಿಗೂ ದೀಪಾವಳಿಯ ಪ್ರಯುಕ್ತ ಬಟ್ಟೆಗಳನ್ನು ಸಂಸ್ಥೆಯವರು ನೀಡಿರುವುದು ಅವರ ವಿಶಾಲ ಹೃದಯ ಮತ್ತು ಮಕ್ಕಳ ಬಗ್ಗೆ ಇರುವ ಕಾಳಜಿ, ಪ್ರೀತಿಯನ್ನು ತೋರಿಸುತ್ತದೆ. ಮಕ್ಕಳನ್ನು ಹೊಸ ಬಟ್ಟೆಯಲ್ಲಿ ನೋಡಿ ತುಂಬಾ ಸಂತೋಷವಾಯಿತು. ಅವರ ಜೊತೆಯಲ್ಲಿ ನಾವು ಕೂಡ ಸಂತೋಷದಲ್ಲಿ ಬಾಗಿಯಾದೆವು ಆದ್ದರಿಂದ ಸಂಸ್ಥೆಯವರಿಗೆ ಹೃದಯಪೂರ್ವಕ ಅಭಿನಂದನೆಗಳು.

ಅಧ್ಯಕ್ಷರು
ಮಕ್ಕಳ ಕಲ್ಯಾಣ ಸಮಿತಿ, ಶಿವಮೋಗ್ಗ

ಯಶೋಗಾಥೆ : ಭಾವನೆಗೆ ಪ್ರಜ್ವಲ ಜೀವನಕ್ಕೆ ಉಜ್ವಲ

ಆ ಒಂದು ದಿನ ಸಂಜೆ 5ಗಂಟೆ ಸುಮಾರಿಗೆ 14 ವರ್ಷದ ನಾನು ಅಸಾಹಯಕ ತಂದೆಯೊಂದಿಗೆ ಉಜ್ವಲ ಕೇಂದ್ರಕ್ಕೆ ತಾತ್ಕಾಲಿಕ ಆಶ್ರಯ ಮತ್ತು ರಕ್ಷಣೆಗಾಗಿ ದಾಖಲಾದ ಸಮಯದಲ್ಲಿ 7 ತಿಂಗಳ ಗರ್ಬಿಣಿ ಆಗಿದ್ದು, 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದೆ. ನಾನು ಶಿವಮೊಗ್ಗ ಜಿಲ್ಲೆಯ ಅತ್ಯಂತ ಕುಗ್ರಾಮಾದಿಂದ ಬಂದವಳಾಗಿದ್ದು ನನ್ನ ವಿದ್ಯಾಭ್ಯಾಸಕ್ಕಾಗಿ ಪ್ರತಿ ದಿನಾ 5 ಕಿ.ಮೀ ನಷ್ಟು ಕಾಡಿನ ಮಧ್ಯೆ ನಡೆದು ಹೋಗಿ ಬರಬೇಕಾದ ಪರಿಸ್ಥಿತಿ ಇತ್ತು. ಅಂತಹ ಪರಿಸ್ಥಿತಿಯಲ್ಲಿ ಯಾವ ಸ್ನೇಹಿತರೂ ಇಲ್ಲದೆ ಒಬ್ಬಂಟಿಯಾಗಿ ಶಾಲೆಗೆ ಹೋಗಿ ಬರುತ್ತಿದ್ದ ಸಮಯದಲ್ಲಿ ನನ್ನ ದೊಡ್ಡಪ್ಪನ ಮಗ (ಸಂಬಂಧದಲ್ಲಿ ಅಣ್ಣ) ಹೆದರಿಸಿ ನನ್ನನ್ನು ಬಲತ್ಕಾರಮಾಡಿದ್ದರ ಪರಿಣಾಮವಾಗಿ ನಾನು 7 ತಿಂಗಳ ಗರ್ಬಿಣಿ ಆಗಿರುತ್ತೇನೆ. ನಾನು ಉಜ್ವಲ ಕೇಂದ್ರಕ್ಕೆ ದಾಖಲಾದ ನಂತರ ನನ್ನನ್ನು ಮಕ್ಕಳ ಕಲ್ಯಾಣ ಸಮಿತಿ ಸಭೆಯ ಮುಂದೆ ಹಾಜರುಪಡಿಸಿ ಎಲ್ಲಾ ಸೌಕರ್ಯಗಳೊಂದಿಗೆ ಅತ್ಯಂತ ಕಾಳಜಿ ವಹಿಸಿ ಆರೋಗ್ಯ ತಪಾಸಣೆ, ಸೂಕ್ತ ಆಪ್ತಸಮಾಲೋಚನೆ, ಕಾನೂನಿನ ನೆರವು ಹಾಗೂ ವಿಶೇಷವಾಗಿ ಶೈಕ್ಷಣಿಕ ನೇರವುನ್ನು ಉಜ್ವಲಕೇಂದ್ರದಿಂದ ನೀಡಿ ಮುಂದೆ ನನಗೆ 10 ನೇ ತರಗತಿಯ ವಾರ್ಷಿಕ ಪರೀಕ್ಷೆಯನ್ನು ಬರೆಯಲು ಆತ್ಮವಿಶ್ವಾಸ ತುಂಬಿರುತ್ತಾರೆ. ಉಜ್ವಲ ಕೇಂದ್ರದಲ್ಲಿಯೇ ವಿಶೇಷವಾಗಿ ಸಿಬ್ಬಂದಿ ವರ್ಗದವರ ಪ್ರಯತ್ನದ ಫಲವಾಗಿ ನಾನು ತುಂಬು ಗರ್ಬಿಣಿಯಾಗಿರುಗಲೇ ವಾರ್ಷಿಕ ಪರೀಕ್ಷೆ ಮುಗಿದ ಮಾರನೇ ದಿನವೇ ಜಿಲ್ಲಾ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ನೀಡಿರುತ್ತೇನೆ. ನನಗೆ ಜನಿಸಿದ ಮಗುವನ್ನು ಸರ್ಕಾರದ ದತ್ತು ಕೇಂದ್ರಕ್ಕೆ ನೀಡಲು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಕೋರಿದ್ದರಿಂದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯವರು ಮಗುವನ್ನು ಸರ್ಕಾರದ ಅದೀನದಲ್ಲಿ ನಡೆಯುತ್ತಿರುವ ದತ್ತು ಕೇಂದ್ರಕ್ಕೆ ಸ್ವೀಕರಿಸಿರುತ್ತಾರೆ.

ನಂತರದಲ್ಲಿ ನಾನು ಕುಟುಂಬ ಸಮಾಲೋಚನೆ ಮತ್ತು ಗೃಹ ತನಿಖಾ ವರದಿ ಆದೇಶದ ಮೇರೆಗೆ ನನ್ನ ಕುಟುಂಬದ ವಾಸ ಸ್ಥಳದಲ್ಲಿ ಪೂರಕವಾದ ವಾತಾವರಣ ಇಲ್ಲದ ಪ್ರಯುಕ್ತ ನನ್ನ ಭವಿಷ್ಯದ ಹಿತದೃಷ್ಠಿಯಿಂದ ಉಜ್ವಲ ಕೇಂದ್ರದಲ್ಲಿಯೆ ಮುಂದುವರೆದಿರುತ್ತೇನೆ.

ನಾನು ವಿದ್ಯಾಭ್ಯಾಸ ಮುಂದುವರೆಸಲು ಉಜ್ವಲ ಕೇಂದ್ರದಿಂದ ನನ್ನನ್ನು ಪಿಯುಸಿ ವಿದ್ಯಾಭ್ಯಾಸಕ್ಕಾಗಿ ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಕಾಲೇಜ್‍ನಲ್ಲಿ ದಾಖಲಾತಿ ಮಾಡಿಸಿರುತ್ತಾರೆ. ನಂತರದಲ್ಲಿ ನಾನು ಶಿವಮೊಗ್ಗದಲ್ಲೆ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣವನ್ನು ಮುಗಿಸಿ ಉದ್ಯೋಗಸ್ಥ ಮಹಿಳೆಯಾಗಿ ಸ್ವಾವಲಂಬಿಯಾಗಿ ಬದುಕುತ್ತಿದ್ದೇನೆ. ನಿರಂತರ ಅನುಸರಣೆಗಾಗಿ ನನ್ನ ಬಿಡುವಿನ ವೇಳೆಯಲ್ಲಿ ಉಜ್ವಲ ಕೇಂದ್ರಕ್ಕೆ ಭೇಟಿ ನೀಡುತ್ತೀರುತ್ತೇನೆ. ಬೇಟಿಯ ಸಮಯದಲ್ಲಿ ನನ್ನ ಎಲ್ಲಾ ನೋವು ನಲಿವುಗಳನ್ನು ಸಿಬ್ಬಂದಿಯೊಂದಿಗೆ ಹಂಚಿಕೊಳ್ಳುತ್ತಿರುತ್ತೇನೆ. ಹಾಗೂ ಪ್ರಸ್ತುತ ಸ್ಪರ್ದಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಯಾರಿ ನೆಡೆಸುತ್ತಿದ್ದೇನೆ. ಉಜ್ವಲ ಕೇಂದ್ರದ ಸಿಬ್ಬಂದಿಯವರಿಂದ ಸ್ಪರ್ದಾತ್ಮಕ ಪರೀಕ್ಷೆಗೆ ಮಾನಸಿಕ ಬೆಂಬಲ ಸಿಗುತ್ತಿದೆ. ನನ್ನ ಸ್ವಾವಲಂಬಿ ಬದುಕು ಕಟ್ಟಕೊಳ್ಳಲು ಸುರಭಿ ಉಜ್ವಲ ಕೇಂದ್ರ ಸಹಕಾರಿಯಾಗಿದೆ ಎಂದು ಪ್ರತಿ ಹಂತದಲ್ಲೂ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನೊಂದಂತಹ ಅದೆಷ್ಟೋ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಈ ಕೇಂದ್ರವು ಆಸರೆಯಾಗಲಿ ಎಂದು ಹಾರೈಸುತ್ತೇನೆ.

ಶಶಿಕಲಾ (ಹೆಸರು ಬದಲಾಯಿಸಿದೆ)
ಫಲಾನುಭವಿ